ಸಹ್ಯಾದ್ರಿ ಕನ್ನಡ ಸಂಘ, Seattle

Home
Committee
Membership
Announcements
Upcoming Events, Calendar
Kannada School
Past Events
Image Gallery
Video Gallery
Executive Committee
Suvarna Karnataka
Other Kannada Sangha
View Guest Book
Sign Guest Book
Useful Links
Contact Us
Site Map
Archive
Pacche Taliru
Yuva Balaga**
ಕನ್ನಡ ಸಂಘ ಬೆಳೆದ ದಾರಿ
Online Chat
About SKS

ದೀಪಾವಳಿ ಮತ್ತು ಅಕ್ಕ ರಸಮಂಜರಿ-೨೦೦೭

 

"ಅನಾಥ ಮಕ್ಕಳಿಗೆ ಅಕ್ಕಳ ಆಶ್ರಯ" ಎಂಬ ಕಾರ್ಯಕ್ರಮದ ಅಡಿಯಲ್ಲಿ ಕರ್ನಾಟಕದ ಅನಾಥಾಲಯಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕಾರ್ಯಕ್ರಮವನ್ನು ಅಕ್ಕ ಸಂಸ್ಥೆಯವರು ಅಮೇರಿಕಾದ ಹಲವಾರು ಕನ್ನಡ ಕೂಟಗಳ ಸಹಭಾಗಿತ್ವದಲ್ಲಿ ರಸಮಂಜರಿ-೨೦೦೭ ಹೊಮ್ಮಿ ಕೊಂಡಿದ್ದರು. ಈ ಸಂದರ್ಭದಲ್ಲಿ ಸಿಯಾಟ್ಲ್ ಪ್ರಾಂತ್ಯದಲ್ಲಿ ನವಂಬರ್ ೩ರಂದು ಸಹ್ಯಾದ್ರಿ ಕನ್ನಡದ ಸಂಘದ ಆಶ್ರಯದಲ್ಲಿ ರಸಮಂಜರಿ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು. ಜನಪ್ರಿಯ ಕಲಾವಿದರಾದ ಡಾ. ಶಮಿತಾ ಮಲ್‍ನಾಡ್, ರಿಚರ್ಡ್ ಲೂಯಿಸ್, ಮೈಸೂರ್ ಆನಂದ್, ಸುನಿಲ್ ರಾವ್ ಹಾಗೂ ಎಲ್.ಎನ್. ಶಾಸ್ತ್ರಿಯವರು ನೆರೆದ ಪ್ರೇಕ್ಷಕರನ್ನು ಮೂರು ಘಂಟೆಗಳಿಗೂ ಮಿಕ್ಕಿ ಮನರಂಜಿಸಿದರು. 

 

ಎಲ್.ಎನ್.ಶಾಸ್ತ್ರಿ ಮತ್ತು ಸುನಿಲ್ ರಾವ್

 

ಸಿನೆಮಾ ನಟ ಸುನಿಲ್ ರಾವ್ "ಗಂಧದ ಗುಡಿ" ಹಾಡಿನಿಂದ ತಾವು ಉತ್ತಮ ಗಾಯಕರು ಎಂದು ಕೂಡಾ ಮನದಟ್ಟು ಮಾಡಿದರು. ಡಾ. ರಾಜ್ ಅವರ "ಹುಟ್ಟಿದರೆ ಕನ್ನಡನಾಡಿನಲ್ಲಿ" ಹಾಡನ್ನು ಎಲ್.ಎನ್.ಶಾಸ್ತ್ರಿಯವರ ಜತೆ ಹಾಡಿ, ಮುಂಗಾರು ಮಳೆಯ "ಅನಿಸುತಿದೆ ಏಕೋ" ಹಾಡಿನಿಂದ ಮುಕ್ತಾಯ ಮಾಡಿದರು.

 

ಹೆಚ್ಚಿನ ಹಾಡುಗಳು ನೆರೆದವರ ಕೋರಿಕೆ ಮೇಲೆ ಹಾಡಲ್ಪಟ್ಟವು. ಸಿಯಾಟಲ್‍ನ ಶರದ್ ಋತುವಿನ ಹಿತವಾದ ಸಂಜೆಯಲ್ಲಿ ಈ ಗಾಯಕಿ-ಗಾಯಕರು ಹಾಡಿದ ಹಾಡುಗಳು ದೇಶ, ಕಾಲದ ಮೇರೆ ಮೀರಿ ಗಂಧರ್ವಗಾನವಾಗಿ ಮಾರ್ಪಟ್ಟವು.

 

 

ಮೈಸೂರು ಆನಂದ್

 

 

 

ಸುನಿಲ್ ರಾವ್ ಮತ್ತು ಡಾ. ಶಮಿತಾ ಮಲ್ನಾಡ್

 

ಸಂಗೀತದ ವಿಭಾಗದಲ್ಲಿ ಜನಪ್ರಿಯ ಗಾಯಕಿ ಶಮಿತಾರವರು ಸುಂದರವಾದ ಪ್ರಾರ್ಥನೆಯಿಂದ ಆರಂಭ ಮಾಡಿ, ರಾಗಪ್ರಧಾನವಾದ "ಬಾನಲ್ಲು ನೀನೆ", "ಮೂಡಣ ಮನೆಯ" ಮಧುರ ಗೀತೆಗಳಿಂದ ಮುಂದುವರಿಸಿ, ಲಯ ಪ್ರಧಾನವಾದ ಆಂಗ್ಲ ಶೈಲಿಯ "ದೂರದಿಂದ ಬಂದಂತ ಸುಂದರಾಂಗ" ಹಾಡಿಗೆ ವಿಸ್ತರಿಸಿ, ನಡುವೆ ಚಿಕ್ಕ ಮಕ್ಕಳ ಮನರಂಜನೆಗಾಗಿ ಬಾಲವಾಡಿಯ ಹಾಡುಗಳನ್ನೂ ಹಾಡಿ ತಮ್ಮ ಸ್ವರ ಜೇನು ಹಾಗೂ ಸ್ವರ ವೈವಿಧ್ಯವನ್ನು ಹಂಚಿದರು. ಅದಲ್ಲದೆ, "ಜತೆ ಜತೆಯಲಿ" ಹಾಡನ್ನು ಸ್ಥಳೀಯ ಗಾಯಕ ಅಭಿಜೀತ್ ಮತ್ತು ಸುನಿಲ್ ರಾವ್ ಜತೆಗೆ ಎರಡು ಸಾರಿ ಹಾಡಿ ಮನ ರಂಜಿಸಿದರು.

 

ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ಎಲ್.ಎನ್.ಶಾಸ್ತ್ರಿಯವರು "ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು.." ಹಾಡಿನಿಂದ ಶ್ರೋತೃಗಳನ್ನು ದಶಕಗಳ ಹಿಂದೆ ಕೊಂಡೊಯ್ದು, "ಹುಟ್ಟಿದರೆ ಕನ್ನಡನಾಡಲಿ ಹುಟ್ಟಬೇಕು.." ಹಾಡಿನಿಂದ ಮತ್ತೆ ಪ್ರಸ್ತುತಕ್ಕೆ ತಂದರು. "ನೀರಬಿಟ್ಟು ನೆಲದ ಮೇಲೆ" ಮತ್ತಿತರ ಗಾನಗಳನ್ನು ಹಾಡಿ ಜನರ ಮನ ಗೆದ್ದರು.

 

ರಿಚರ್ಡ್ ಲೂಯಿಸ್

 

ನಗೆ ವಿಭಾಗದಲ್ಲಿ ರಿಚರ್ಡ್ ಲೂಯಿಸ್ ತಮ್ಮ ನಿರರ್ಗಳ ಹರಟೆ ಮತ್ತು ಹಾಸ್ಯದಿಂದ ಜನರನ್ನು ನಗೆಗಡಲಿನಲ್ಲಿ ಮುಳುಗಿಸಿದರು. ಕನ್ನಡ ಭಾಷೆಯ ಅಂದವನ್ನು ವಿವಿಧ ರೀತಿಗಳಲ್ಲಿ ತೋರಿಸಿದರು. ಚಪ್ಪಾಳೆ, ಹಸಿವು ಕೂಡಾ ಅವರ ಹಾಸ್ಯದ ವಿಷಯಗಳಾದವು.

 

ಮೈಸೂರು ಆನಂದ್‍ರವರು ಪ್ರಾರ್ಥನೆ ಆಂಗ್ಲ ಭಾಷೆಯಲ್ಲಿ ಮಾಡಿದರೆ ಹೇಗಿರುತ್ತೆ ಎಂದು ಪ್ರಾರಂಭಿಸಿ, ಗಾನ ಲಹರಿಯಲ್ಲಿ ಹಾಸ್ಯವನ್ನು ಮಿಶ್ರಣ ಮಾಡಿ, ತಮ್ಮ ಹಾವ ಭಾವಗಳಿಂದ ಅನುಕರಣೆ ಮಾಡಿ ಜನರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದರು. ಕ್ಯಾಬರೆ ನೃತ್ಯ ಮತ್ತು ಮೈಕೆಲ್ ಜಾಕ್ಸನ್ ಅನುಕರಣೆ ತಮಾಷೆಯ ಉತ್ತುಂಗಕ್ಕೇರಿಸಿತು.

ಇವರಿಬ್ಬರ ಹಾಸ್ಯ ಲಹರಿಯ ಸಮಯದಲ್ಲಿ  ಸಭಾ ಭವನವಿಡೀ ನಗೆ ಮತ್ತು ಚಪ್ಪಾಳೆ ಶಬ್ದದಲ್ಲಿ ಮುಳುಗಿತ್ತು. ಪ್ರೇಕ್ಷಕರ ಅಪೇಕ್ಷೆ ಮೇರೆಗೆ ಸಮಯಕ್ಕೆ ಮೀರಿ ಕಾರ್ಯಕ್ರಮ ಮುಂದುವರಿಯಿತು. ಆದರೂ ಕಡೆಗೆ ಮುಗಿಸಲೇ ಬೇಕಾದಾಗ ಇನ್ನೂ ಬೇಕು ಬೇಕು ಅನಿಸುವಂತಿತ್ತು.

 

ಕಾರ್ಯಕ್ರಮದ ಕೊನೆಗೆ ನೆರೆದವರೆಲ್ಲರೂ ಎದ್ದು ನಿಂತು ಪ್ರಚಂದ ಕರತಾಡನ ಮಾಡಿ ಕಲಾವಿದರಿಗೆ ತಮ್ಮ ಮೆಚ್ಚಿಗೆಯನ್ನು ತೋರಿಸಿದರು.

ತದನಂತರ ಅನೇಕ ಜನರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು:


"ಇದು ಕನ್ನಡ ಸಂಘ ಮಾಡಿರುವ ಅತ್ಯಂತ ಉತ್ತಮವಾದ ಕಾರ್ಯಕ್ರಮ"
"ಇಂತಹ ಉತ್ತಮವಾದ ಕಲಾದಿದರನ್ನು ಇಷ್ಟು ಒಳ್ಳೆಯ ಉದ್ದೇಶಕ್ಕೆ ತರಿಸಿರುವುದು ಬಹಳ ಶ್ಲಾಘನೀಯ"
"ನಾವು ಮೂರು ಘಂಟೆ ಕಾಲ ಪ್ರಯಾಣ ಮಾಡಿ ಇದಕ್ಕೋಸ್ಕರ ಬಂದೆವು. ಮನೆ ಮುಟ್ಟುವಾಗ ರಾತ್ರಿ ಎರಡು ಘಂಟೆ. ಆದರೂ, ಕಾರ್ಯಕ್ರಮ ಇನ್ನೂ ಒಂದೆರಡು ಘಂಟೆ ಜಾಸ್ತಿ ನಡೆದಿದ್ದರೆ ಕುಳಿತುಕೊಂಡು ನೋಡುತ್ತಿದ್ದೆವು."
"ಪ್ರತಿ ವರ್ಷವೂ ಇಂತಹಗುಣಮಟ್ಟದ ಕಲಾವಿದರನ್ನು ದಯವಿಟ್ಟು ತರಿಸಿ"

"ನಾವು ಇಷ್ಟು ಜೋರಾಗಿ ನಕ್ಕು ತುಂಬಾ ಸಮಯವಾಯಿತು.."

 

ಈ ರಸಮಂಜರಿ ಸಮಾರಂಭ ವಾಯವ್ಯ ಅಮೇರಿಕಾ ಪ್ರಾಂತ್ಯದ ಮತ್ತು ವ್ಯಾಂಕೂವರಿನ ಕನ್ನಡಿಗರಿಗೆ ತಾವು ನಕ್ಕು, ಕರ್ನಾಟಕದ ಅನಾಥ ಮಕ್ಕಳ ಮುಖದಲ್ಲೂ ನಗೆ ಬರಿಸಲು ಒಂದು ಅವಕಾಶ ಕಲ್ಪಿಸಿತು.